ಪ್ರಕೃತಿಯ ಸೊಬಗನ್ನು ತನ್ನ ಒಡಲಲ್ಲಿಟ್ಟುಕೊಂಡಿರುವ ಅರಬ್ಬಿ ಸಮದ್ರದ ದಂಡೆಗುಂಟ ಹಬ್ಬಿಕೊಂಡಿರುವ ಸುಂದರ ಪುಟ್ಟ ನಗರ ಭಟ್ಕಳ ಇಲ್ಲಿ ಬಹುಭಾಷೆ, ಬಹುಸಂಸ್ಕೃತಿಯುಳ್ಳ ಜನರು ಅತ್ಯಂತ ಸೌಹಾರ್ಧತೆಯಿಂದ ಬಾಳುತ್ತಿದ್ದು ಅದೇಕೋ ಮಾಧ್ಯಮಗಳು ಇಲ್ಲಿನ ಶಾಂತಿ ಸೌಹಾರ್ಧತೆಯನ್ನು ಕಂಡು ಮತ್ಸರಪಟ್ಟುಕೊಳ್ಳುತ್ತಿರುವಂತೆ ತೋರುತ್ತಿದೆ.
೧೯೯೩ ರ ಕೋಮು ಗಲಭೆಯ ಅಹಿತಕರ ಘಟನೆಯಿಂದ ಹೊರಬಂದು ಎಚ್ಚುತ್ತುಕೊಂಡ ಇಲ್ಲಿಯ ಜನತೆ ಮತ್ತೆ ಹೊರಳಿ ಆ ಕಡೆ ತಲೆಹಾಕಿದ್ದಿಲ್ಲ. ಆದರೆ ಕೆಲವು ಕಿಡಿಗೇಡಿಗಳು ಮಾತ್ರ ಆ ದಿನಗಳನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುವಂತಹ ಸಂದರ್ಭವನ್ನು ಒದಗಿಸಿಕೊಡುತ್ತಿರುವುದು ಮಾತ್ರ ಇಲ್ಲಿನ ಜನತೆಯನ್ನು ಕಾಡುತ್ತಿರುವ ಬಹುದೊಡ್ಡ ಸಮಸ್ಯೆಯಾಗಿದೆ. ಇದಕ್ಕೆ ಮಾಧ್ಯಮಗಳು ಉಪ್ಪು ಕಾರ ಬೆರೆಸಿ ಇಲ್ಲಿನ ಶಾಂತಿ ಸೌಹಾರ್ಧತೆಯನ್ನು ಕದಡುವ ಪ್ರಯತ್ನದಲ್ಲಿ ತಮ್ಮ ಅಳಿಲು ಸೇವೆಯನ್ನು ಸಲ್ಲಿಸುತ್ತಿವೆ.
೧೯೯೩ ಕೋಮುಗಲಭೆಯಿಂದಲೆ ರಾಷ್ಟ್ರೀಯ ಮಟ್ಟದಲ್ಲಿ ಗುರುಸಿಕೊಂಡ ಭಟ್ಕಳ ನಗರ ಮುಂಬೈ ಸರಣಿ ರೈಲು ಸ್ಪೋಟದ ಬಳಿಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಮಾಡಿತು. ಇದಕ್ಕೆ ಕಾರಣ ಭಟ್ಕಳ ಮೂಲದ ಮುಂಬೈ ನಿವಾಸಿ ರಿಯಾಝ್ ಶಾಬಂದ್ರಿ. ಈಗ ಈತ ಟೆರರ್ ಮಾಸ್ಟರ್ ಮೈಂಡ್ ಎಂಬ ಬಿರುದನ್ನು ಹೊಂದಿದ್ದು ಆತನಿಗೆ ಈ ಬಿರುದು ಬರಲು ಮಾಧ್ಯಮಗಳೇ ಬಹುತೇಕ ಕಾರಣ. ಮುದ್ರಣ ಮಾಧ್ಯಮದಿಂದ ಹಿಡಿದು ದೃಶ್ಯ ಮಾಧ್ಯಮ ಮತ್ತು ಬಹುಮಾಧ್ಯಮಗಳು ಸಹ ಈತನನ್ನು ಮಹಾ ಭಯೋತ್ಪಾದಕನೆಂದು ಹಾಡಿಹೊಗಳಿದ್ದೆ ಹೊಗಳಿದ್ದು. ಫೆ.೨೩ರಂದು ಝೀ ಸುದ್ದಿವಾಹಿನಿಯು ರಿಯಾಝ್ ಹಾಗೂ ಭಟ್ಕಳ ಕುರಿತಾಗಿ ಒಂದು ವರದಿಯನ್ನು ಬಿತ್ತರಿಸಿತು. ಇದನ್ನು ನೋಡಿದವರೆಲ್ಲರೂ ಭಟ್ಕಳ ಇಡಿ ಜಗತ್ತಿನ ಭಯೋತ್ಪಾದನೆಗೆ ಭಟ್ಕಳವೆ ಕಾರಣ.ಇಲ್ಲಿಯೆ ಭಯೋತ್ಪಾದಕರೆಲ್ಲರು ತರಬೇತಿಯನ್ನು ಪಡೆದಿರಬಹುದು ಎಂಬುದು ಮನದಟ್ಟಾಗಿಡುವಷ್ಟು ಸುಳ್ಳನ್ನು ಹೇಳಿತು. ನಿಜಕ್ಕೂ ಈ ವರದಿಯಿಂದ ಭಟ್ಕಳ ಎಂಬ ಹೆಸರನ್ನು ನೆನಪಿಸಿಕೊಂಡರೆ ಸಾಕು ಒಮ್ಮೆ ಮೈ-ಮನಸ್ಸು ಝುಮ್ಮೆನ್ನುವಂತಾಗಿತ್ತು. ಆದರೆ? ವಾತ್ಸವದಲ್ಲಿ ಇಲ್ಲಿ ಇದ್ದುದ್ದಾರೂ ಏನು? ಅದು ಇಲ್ಲಿಯರಿಗೆ ಮಾತ್ರ ಗೊತ್ತು ಏಕೆಂದರೆ ಹೊರಜಗತ್ತು ಇಲ್ಲಿಯವರೆಗೆ ಕೇವಲ ಇಲ್ಲಿನ ಕರಾಳ ಮುಖವನ್ನು ಮಾತ್ರ ಕಂಡಿದೆ ಅದು ಮಾಧ್ಯಮಗಳ ಕೃಪಾಕಟಾಕ್ಷದಿಂದ. ಇಲ್ಲಿನ ಅಧಿಕಾರಿಗಳು, ಜನಪ್ರತಿನಿಧಿಗಳು ಸಾಮಾನ್ಯ ಜನರು ಭಟ್ಕಳದಲ್ಲಿ ಭಯೋತ್ಪಾದನೆಯ ಕುರಿತು ಏನು ಹೇಳುತ್ತಾರೆ ಎಂಬುದನ್ನು ಕೇಳಲು ಸಹ ಹೋಗದ ಝೀ ಸುದ್ದಿ ವಾಹಿನಿಯ ವರದಿಗಾರ ಕೇವಲ ಪೂರ್ವಗ್ರಹ ಪೀಡಿತನಾಗಿ ತಾನು ಜಗತ್ತಿಗೆ ಮೊಟ್ಟಮೊದಲಾಗಿ ತೋರಿಸುತ್ತಿದ್ದೇನೆ ಎಂಬಂತ್ತೆ ರಿಯಾಝ್ ಶಾಬಂದ್ರಿಯ ಮನೆಯನ್ನು ತೋರಿಸಿ ಇದು ಪಾತಕಿಯ ಮನೆ ಎಂದು ಬಿಂಬಿಸಿದ. ಇಷ್ಟಕ್ಕೂ ಸಾಲದು ಎಂಬಂತೆ ಇಲ್ಲಿನ ಬಂದರ್ ರಸ್ತೆಯ ಸಮದ್ರ ಕಿನಾರೆಯನ್ನು ತೋರಿಸಿ ಇಲ್ಲಿಂದಲೆ ಭಯೋತ್ಪಾದಕರು ನುಸುಳಿಕೊಂಡು ಭಟ್ಕಳಕ್ಕೆ ಬರುತ್ತಾರೆ ಎಂಬ ತನ್ನ ನೀಚ ಬುದ್ದಿಯನ್ನು ಪ್ರದರ್ಶಿಸಿದ. ಅಷ್ಟಕ್ಕೂ ಈ ರಿಯಾಝ್ ಶಾಬಂದ್ರಿ ಯಾರು? ಇವನೇನು ಮಹಾ ಪಾತಕನೆ? ಎಂಬಿತ್ಯಾದಿ ಪ್ರಶ್ನೆಗಳು ಉದ್ಭವಿಸುತ್ತವೆ.
ರಿಯಾಝ್ ಶಾಬಂದ್ರಿ ಹುಟ್ಟಿದ್ದು,ಬೆಳೆದಿದ್ದು,ಓದಿದ್ದು ಎಲ್ಲವೂ ಮುಂಬೈಯಲ್ಲಿ. ಆತನು ಇಲ್ಲಿಯ ಯುವತಿಯನ್ನು ಮದುವೆಯಾಗಿದ್ದು ಬಿಟ್ಟರೆ ಬೆರೆಲ್ಲವೋ ಭಟ್ಕಳದ ಹೊರಗೆ. ಆತನಿಗೆ ಭಟ್ಕಳದ ಸಂಸ್ಕೃತಿ ಇಲ್ಲಿಯ ಆಗು ಹೋಗುಗಳು ಯಾವುದು ತಿಳಿದಿಲ್ಲ. ಆತನ ತಂದೆ ಇಸ್ಮಾಯಿಲ್ ಶಾಬಂದ್ರಿ ಎಂಬುವವರು ಮುರುಡೇಶ್ವರದವರು ತಾಯಿ ಭಟ್ಕಳದವಳು. ಇವರು ತಮ್ಮೆಲ್ಲ ಹೆಚ್ಚಿನ ವಯಸ್ಸನ್ನು ಕಳೆದದ್ದು ಮುಂಬೈಯಲ್ಲಿ. ಇಸ್ಮಾಯಿಲ್ ಶಾಬಂದ್ರಿ ಕೆಲವಾರು ವರ್ಷ ಗಲ್ಫರಾಷ್ಟ್ರಗಳಲ್ಲಿ ಉದ್ಯೋಗಿಯಾಗಿದ್ದರು ಎಂದು ತಿಳಿದುಬಂದಿದೆ. ಅವರು ಭಟ್ಕಳಕ್ಕೆ ಬಂದು ಸೇರಿದ್ದು ಮಾತ್ರ ಕೆಲವು ವರ್ಷಗಳ ಹಿಂದೆ. ೨೦೦೬ರಲ್ಲಿ ಮುಂಬೈಯಲ್ಲಿ ನಡೆದ ಸರಣಿ ರೈಲು ಸ್ಪೋಟದ ಸಂದರ್ಭದಲ್ಲಿ ರಿಯಾಝ್ ಹೆಸರು ಕೇಳಿಬಂದಾಗ. ಅಂದಿನಿಂದ ಇಂದಿನವರೆಗೆ ಅವನು ಎಲ್ಲಿದ್ದಾನೆ ಎಂಬುದು ಸಹ ಅವರ ಮನೆಯವರಿಗಾಗಲಿ ಸಂಬಂಧಿಕರಿಗಾಗಲಿ ತಿಳಿದಿಲ್ಲ.
(ರಿಯಾಝ್ ತಂದೆ-ತಾಯಿ)
ದೇಶದ ಅಥವಾ ಜಗತ್ತಿನ ಯಾವದೇ ಮೂಲೆಯಲ್ಲಿ ಭಯೋತ್ಪಾದನಾ ಕೃತ್ಯ ಜರುಗಿದರೂ ಸಾಕು ಅಲ್ಲಿ ಅನಾಮತ್ತಾಗಿ ಹೆಸರು ಕೇಳಿ ಬರುವುದು ರಿಯಾಝ್ ಭಟ್ಕಳ್ ಎಂದು. ಆತನ ಮಾತಪೀತರು ಹೇಳುವಂತೆ ಅವನು ಸತ್ತಿದ್ದಾನೋ ಬದುಕಿದ್ದಾನೋ ಗೊತ್ತಿಲ್ಲ. ಆದರೆ ಪ್ರತಿಯೊಂದು ಭಯೋತ್ಪಾದನ ಕೃತ್ಯಗಳಲ್ಲಿ ಮಾಧ್ಯಗಳು ಮಾತ್ರ ಯತೇಚ್ಚವಾಗಿ ಆತನ ಹೆಸರನ್ನು ಬಳಸಿಕೊಳ್ಳತ್ತಾರೆ. ಮತ್ತು ಎಲ್ಲವನ್ನು ಆತನ ತಲೆಗೆ ಕಟ್ಟಿ ಕುಳಿತುಕೊಳ್ಳುತ್ತಾರೆ. ಯಾವುದೆ ತನಿಖೆಯನ್ನು ಮಾಡದೆ ಎಲ್ಲ ಆರೋಪಗಳನ್ನು ರಿಯಾಝ್ ಶಾಬಂದ್ರಿಯ ಮೇಲೆ ಹೊರಿಸುತ್ತಾರೆ. ತನಿಖೆಯನ್ನು ಮಾಡಿ ಆರೋಪಗಳು ಸಾಬೀತಾದರೆ ಅವನನ್ನು ಗಲ್ಲಿಗೇರಿಸಿ ಎಂದು ಗದ್ಗದಿತರಾಗಿ ನುಡಿಯುತ್ತಾರೆ ರಿಯಾಝ್ ನ ತಂದೆ ಇಸ್ಮಾಯಿಲ್ ಶಾಬಂದ್ರಿ. ಕಳೆದ ಐದಾರು ವರ್ಷಗಳಿಂದ ಟಿ.ವಿಯವರು, ಪೇಪರ್ ನವರು ಮನೆಗೆ ಬರುತ್ತಾರೆ ನಾವು ಹಾಗೆ ಹೀಗೆ ಎಂದು ಹೇಳಿ ನಮ್ಮ ದುಖಃವನ್ನು ಇಮ್ಮಡಿಗೊಳಿಸುತ್ತಾರೆ ಮತ್ತೆ ಮರುದಿನ ಪತ್ರಿಕೆಯಲ್ಲಿ, ಟಿವಿಯಲ್ಲಿ ಪಾತಕಿಯ ಮನೆ ಎಂದು ನಮ್ಮ ಮನೆಯನ್ನು ತೋರಿಸುತ್ತಾರೆ. ಇದರಿಂದಾಗಿ ನಮ್ಮಿಂದ ನಮ್ಮ ಸಬಂಧಿಕರು, ಸ್ನೇಹಿತರು, ದೂರವಾಗಿದ್ದಾರೆ. ನಮ್ಮ ಮನೆಯ ಕಡೆಗೆ ತಿರುಗಿ ಸಹ ನೋಡದ ಪರಿಸ್ಥಿತಿಯಲ್ಲಿ ಅವರಿದ್ದಾರೆ. ದಿನದ ೨೪ ಗಂಟೆಯೂ ಪೋಲಿಸ್ ಕಾವಲು. ಒಂದು ರೀತಿಯ ಬಂಧನದ ಜೀವನ ನಮ್ಮದಾಗಿದೆ ಎಂದು ತಾಯಿ ಸಈದಾ ಕಣ್ಣೀರು ಹಾಕುತ್ತಾರೆ. ಅವರು ಸಾಮಾಜಿಕವಾಗಿ ಯಾರೊಂದಿಗೂ ಬೆರೆಯಲಾರರು ಊರಿನ ಗಣ್ಯರು ಎಂದು ಹೇಳಿಕೊಳ್ಳುವವರು ಸಹ ಅವರನ್ನು ಭೇಟಿ ಮಾಡಲು ಹಿಂಜರಿಯುತ್ತಾರೆ.ಏಕೆಂದರೆ ಯಾರಾದರೂ ಕಂಡರೆ? ಎನ್ನುವ ಭಯ. ಪರಿಸ್ಥಿತಿ ಎಲ್ಲಿಯವರೆಗೆ ಹೋಗಿದೆ ಎಂದರೆ ಸಂಬಂಧಿಕರು ಸಹ ಅವರ ಮನೆಗೆ ಹೋಗಲು ಹೆದರುತ್ತಾರೆ ನಾಳೆ ನಮ್ಮನ್ನೂ ಭಯೋತ್ಪಾಕರು ಎನ್ನುವ ಪಟ್ಟ ಕಟ್ಟಿಬಟ್ಟರೆ ಹೇಗೆ ಎಂಬ ಆತಂಕ. ಈಗ ಹೇಳಿ ಯಾರು ಭಯೋತ್ಪಾದಕರು? ಭಟ್ಕಳದ ಕುರಿತಾಗಿ, ಶಾಬಂದ್ರಿ ಮನೆಯ ಕುರಿತಾಗಿ ಜನರಲ್ಲಿ ಭಯಬೀತಿಯನ್ನು ಹುಟ್ಟಿಸುವ ಮಾದ್ಯಮಗಳೇ ಅಥವಾ ಯಾವುದೆ ತಪ್ಪನ್ನು ಮಾಡದ ರಿಯಾಝ್ ಶಾಬಂದ್ರಿಯ ಮನೆಯೆ?
ಮಾಧ್ಯಗಳು ಭಟ್ಕಳದ ಕುರಿತಾಗಿ ಜನರನ್ನು ಯಾವರೀತಿ ದಾರಿ ತಪ್ಪಿಸುತ್ತಿವೆ ಎಂಬುದಕ್ಕೆ ಫೆ.೨೩ ರ ಸಂಯಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರಕಟಗೊಂಡ ವರದಿಯೇ ಸಾಕ್ಷಿ. ಶಿರಸಿಯ ಕೆ.ಆರ್ ಪ್ರಕಾಶ ಎಂಬ ವರದಿಗಾರ ಇಂತಹ ಒಂದು ಭಯೋತ್ಪಾದಕ ಬರಹವನ್ನು ಬರೆದು ಅದರಲ್ಲಿ ತನ್ನ ಪೈಶಾಚಿಕ ವಿಚಾರಗಳನ್ನು ವಾಂತಿಮಾಡಿಕೊಂಡಿದ್ದಾರೆ. ನಗರದ ಹೃದಯ ಭಾಗದಲ್ಲಿರುವ ಎರಡೂ ಅತ್ಯಂತ ಪುರಾತನ ಮಸೀದಿಗಳಾದ ಸುಲ್ತಾನ ಪಳ್ಳಿ ಮತ್ತು ಚಿನ್ನದ(ಜಾಮಿಯ)ಪಳ್ಳಿಯ ಚಿತ್ರಗಳನ್ನು ಪ್ರಕಟಿಸಿ ಇವು ಭಟ್ಕಳದಲ್ಲಿ ಭಯೋತ್ಪಾದನೆಯ ತಾಣವಾಗಿವೆ. ಈ ಪ್ರದೇಶದಲ್ಲಿ ಮಾಧ್ಯಮದವರಿಗಾಗಲಿ, ಪೋಲಿಸರಾಗಲಿ ಪ್ರವೇಶಿಸುವಂತಿಲ್ಲ ಇದೊಂದು ಅಘೋಷಿತ ನಿರ್ಭಂದಿತ ಪ್ರದೇಶವೆಂದು ಬಿಂಬಿಸಿದ್ದು ಇದರ ಹಿಂದೆ ದುಷ್ಟಶಕ್ತಿಗಳ ಕಾಣದ ಕೈ ಕೆಲಸಮಾಡಿದಂತೆ ತೋರುತ್ತಿದೆ. ಶಿರಸಿಯಲ್ಲಿದ್ದುಕೊಂಡ ಈ ವರದಿಗಾರ ಮಹಾಶಯನಿಗೆ ಇಲ್ಲಿಯ ವಸ್ತುಸ್ಥಿತಿಯ ಅರಿವಾದರೂ ಹೇಗಾಗಬೇಕು ಯಾರೋ ದರ್ಭೆ ಎತ್ತುವ ಕೆಲವು ಸ್ವಯಂಘೋಷಿತ ಜರ್ನಲಿಸ್ಟ್ ಗಳು ಈ ಕೃತ್ಯ ಮಾಡಿದ ಬಗ್ಗೆ ಸುಳಿವು ಲಭ್ಯವಾಗಿದೆ. ಸಂಯುಕ್ತ ಕರ್ನಾಟಕ ಪತ್ರಿಕೆ ನಿನ್ನೆ ಇಂದು ಹುಟ್ಟಿದ್ದಲ್ಲ. ಮತ್ತು ಅದಕ್ಕೆ ಯಾರೂ ಕೂಡ ಪತ್ರಿಕೋದ್ಯಮದ ನೈತಿಕತೆಯನ್ನು ತಿಳಿಸಿ ಹೇಳಬೇಕಾಗಿಲ್ಲ. ಆದರೆ ಈ ಭಿಕ್ಷೆ ಎತ್ತುವ ವರದಿಗಾರನಿಂದಾಗಿ ಅದು ತನ್ನ ಹೆಸರನ್ನು ಕೆಡಿಸಿಕೊಳ್ಳುತ್ತಿರುವುದು ಮಾತ್ರ ಪತ್ರಿಕಾ ರಂಗದ ಅಧೋಗತಿಯನ್ನಬಹುದು. ಭಟ್ಕಳದ ಕಡೆ ಇಣುಕಿಯೋ ನೋಡದೆ ಯಾರೋ ಫೋನ್ ನಲ್ಲಿ ಕೊಟ್ಟದ್ದನ್ನು ಬರಹಕ್ಕಿಳಿಸಿದ ಈ ವರದಿಗಾರನಿಗೆ ಸ್ವಲ್ಪವಾದರೂ ನೈತಿಕತೆಯಿದೆ ಎಂದಾದರೆ ಇಲ್ಲಿನ ಭಯೋತ್ಪಾದಕ ತಾಣಗಳೆಂದು ಹೆಸರಿಸಿದ್ದ ಮಸೀದಿಗಳಲ್ಲಿ ದಿನದ ೨೪ ಗಂಟೆಯು ಪ್ರವೇಶ ನೀಡುತ್ತಿದ್ದು ಬಂದು ಒಮ್ಮೆ ನೋಡಿಕೊಂಡು ಹೋಗುವುದು ಒಳಿತು. ಇದನ್ನು ಬಿಟ್ಟು ಮನಸ್ಸಿಗೆ ತೋಚಿದಂತೆ ಗೀಚುವುದು ಸಲ್ಲ ಎಂದು ಇಲ್ಲಿನ ಮುಸ್ಲಿಮರು ಬುದ್ದಿಮಾತು ಹೇಳುತ್ತಿದ್ದಾರೆ. ಈ ವರದಿಗೆ ಸಂಬಂಧಿಸಿದಂತೆ ಇಲ್ಲಿನ ಶಾಸಕ ಜೆ.ಡಿ.ನಾಯ್ಕ, ತಂಝೀಮ್ ಸಂಸ್ಥೆ, ವಿವಿಧ ಜಮಾತಗಳು ಪೋಲಿಸ್ ಅಧಿಕಾರಿಗಳು ಸಾರ್ವಜನಿಕರು ಸೇರಿದಂತೆ ಬುದ್ದಿಜೀವಿಗಳು ಇದನ್ನು ತೀವ್ರವಾಗಿ ಖಂಡಿದ್ದು ಭಟ್ಕಳ ಹಾಗೂ ಭಟ್ಕಳದ ಮುಸ್ಲಿಮರ ಹೆಸರನ್ನು ಕೆಡಿಸಲು ಉದ್ದೇಶಪೂರ್ವಕವಾಗಿ ಮಾಡಿರುವ ದುಷ್ಕೃತ್ಯವಾಗಿದೆ ಎನ್ನುತ್ತಾರೆ. ಭಟ್ಕಳ ಶಾಂತಿ ಸೌಹರ್ಧತೆಯ ಬೀಡಾಗಿದ್ದು ಇದರಲ್ಲಿ ಹುಳಿಹಿಂಡುವ ಕೆಲಸ ವ್ಯವಸ್ಥಿತವಾಗಿ ನಡೆದಿದೆ ಎನ್ನುವುದಕ್ಕೆ ಇಂತಹ ಬರಹಗಳೇ ಸಾಕ್ಷಿ.
ಪೋಲಿಸರು ಏನು ಹೇಳುತ್ತಾರೆ?: ಭಟ್ಕಳ ಹಾಗೂ ಭಟ್ಕಳದ ಮುಸ್ಲಿಮರ ಕುರಿತಾಗಿ ದಿನಕ್ಕೊಂದು ಕತೆ ಎಂಬಂತೆ ಹಲವರು ಹಲವಾರು ರೀತಿಯಲ್ಲಿ ಬರೆದು ಜನರಲ್ಲಿ ಮತ್ತಷ್ಟು ಭಯವನ್ನುಂಟು ಮಾಡುತ್ತಿರುವ ವಿಷಯಕ್ಕ ಸಂಬಂಧಿಸಿದಂತೆ ಐಜಿಪಿ ಯಿಂದ ಹಿಡಿದು ಜಿಲ್ಲಾಪೋಲಿಸ್ ವರಿಷ್ಠ ಹಾಗೂ ಸ್ಥಳಿಯ ಪೋಲಿಸ್ ಅಧಿಕಾರಿಗಳು ಸೇರಿದಂತೆ ಇಲ್ಲಿ ಯಾವುದೆ ಭಯೋತ್ಪಾದಕ ಚಟುವಟಿಕೆ ನಡೆಯುತ್ತಿರುವ ಕುರಿತು ಇಲಾಖೆಗೆ ಯಾವುದೇ ಮಾಹಿತಿ ಇಲ್ಲ ಕೇವಲ ಅಂತೆಕಂತೆಗಳ ಹೊರತಾಗಿ ಇಲ್ಲಿ ಬೇರೇನು ಇಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ. ಅಂದರೆ ಮಾಧ್ಯಮಗಳು ಸುಳ್ಳನ್ನು ನೂರು ಸಲ ಹೇಳಿದರೆ ಅದು ಸತ್ಯವಾಗುತ್ತದೆ ಎಂದ ನೀತಿಯನ್ನು ಅನುಸರಿಸಿ ಇಲ್ಲಿ ಭಯೋತ್ಪಾದಕರಿದ್ದಾರೆ ಎಂದು ಸುಳ್ಳು ಹೇಳಿ ಹೇಳಿ ಇಡಿ ಜಗತ್ತಿಗೆ ನಂಬಿಸುವಂತೆ ಮಾಡುತ್ತಿರುವುದು ಮಾತ್ರ ಸೂಜಿಗವೆನಿಸಿದೆ.
(ಫೊಟೊ: ೨೫-ಬಿಕೆಎಲ್-೦೧- ೨೫-ಬಿಕೆಎಲ್-೦೨- , ೨೫-ಬಿಕೆಎಲ್-೦೩ ರಿಯಾಝ್ ಮನೆ)
ಮುಹಮ್ಮದ್ ರಝಾ ಮಾನ್ವಿ